ಅರ್ಕಾವತಿ ನದಿ ಪಾತ್ರದ ಕೆರೆಗಳಾದ ದೊಡ್ಡತುಮಕೂರು ಕೆರೆ, ಚಿಕ್ಕತುಮಕೂರು ಕೆರೆಗಳು ಕಲುಷಿತಗೊಂಡಿದ್ದು, ನಿರಂತರವಾಗಿ ಸಾವನ್ನಪ್ಪುತ್ತಿರುವ ಕೆರೆಗಳಲ್ಲಿನ ಮೀನುಗಳು. ಇದಕ್ಕೆಲ್ಲಾ ಕಾರಣ ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಒಳ ಚರಂಡಿ ನೀರು, ಕಾರ್ಖಾನೆಗಳ ರಾಸಾಯನಿಕ ಯುಕ್ತ ತ್ಯಾಜ್ಯ ನೀರು ನೇರವಾಗಿ ಈ ಕೆರೆಗಳ ಒಡಲು ಸೇರುವುದರಿಂದ ಇಂತಹ ಘಟನೆ ಮರುಕಳಿಸುತ್ತಿದೆ ಎಂದು ಕೆರೆ ಹೋರಾಟ ಸಮಿತಿ ದೂರಿದೆ.
ಕೆರೆಗಳ ಸಂರಕ್ಷಣೆಗೆ, ಕೆರೆ ಕಲುಷಿತಕ್ಕೆ ಕಾರಣವಾಗುತ್ತಿರುವವರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಅರ್ಕಾವತಿ ಕೆರೆ ಹೋರಾಟ ಸಮಿತಿ ಎಷ್ಟೇ ಬಾರಿ ಹೋರಾಟ, ಧರಣಿ, ಪ್ರತಿಭಟನೆ, ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡಿದರು ಇನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಬದಲಿಗೆ ಜಲಚರ ಪ್ರಾಣಿಗಳ ಸಾವು ಮುಂದುವರಿಯುತ್ತಲೇ ಇದೆ. ಇಷ್ಟೆಲ್ಲಾ ಆದರೂ ಎಚ್ಚೆತ್ತುಕೊಳ್ಳದ ಸಂಬಂಧಪಟ್ಟ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು.
ಮೀನುಗಳು ಸತ್ತಾಗ ಮಾತ್ರ ಸ್ಥಳಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಭೇಟಿ ಕೊಟ್ಟು ಸ್ಯಾಂಪಲ್ ತೆಗೆದುಕೊಂಡು ಹೋಗಿ ವರದಿ ಕೊಡುತ್ತದೆಷ್ಟೇ, ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸುವುದಿಲ್ಲ ಎಂದು ಗ್ರಾಮಸ್ಥರ ಆಕ್ರೋಶ.
ಗ್ರಾಮಸ್ಥರಿಗೆ ಕುಡಿಯಲು ನೀರು ಸಹ ಇಲ್ಲ, ಇತ್ತೀಚಿಗೆ ಜಕ್ಕಲಮಡುಗು ಜಲಾಶಯದಿಂದ ಶುದ್ಧೀಕರಿಸಿದ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೆರೆ ನೀರನ್ನು ಬಳಸಿದರೆ ಏನಾದರೂ ಆಗಬಹುದು ಎಂಬ ಜೀವ ಭವಯದಲ್ಲಿ ಜೀವನ ನಡೆಸುತ್ತಿರುವ ಗ್ರಾಮಸ್ಥರು.
ಕೆರೆಗಳ ಉಳಿವಿಗಾಗಿ, ಕೆರೆಗಳ ಶುದ್ಧೀಕರಣಕ್ಕಾಗಿ ಅವಿರತ ಹೋರಾಟ ನಡೆಸುತ್ತಿರುವ ಅರ್ಕಾವತಿ ಕೆರೆ ಹೋರಾ ಸಮಿತಿ ಹಾಗೂ ಗ್ರಾಮಸ್ಥರು, ಪರಿಸರಾಸ್ತಕರು. ಇದಕ್ಕೆ ವ್ಯತಿರಿಕ್ತವಾಗಿ ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎನ್ನುವ ಮನೋಭಾವದಿಂದ ಇರುವ ಸಂಬಂಧಪಟ್ಟ ಇಲಾಖೆಗಳು, ಜನಪ್ರತಿನಿಧಿಗಳು.
ಒಟ್ಟಾರೆ ಯಾರೋ ಮಾಡುತ್ತಿರುವ ತಪ್ಪಿಗೆ ಮೂಕ ಪ್ರಾಣಿಗಳು ಜೀವ ಕಳೆದುಕೊಳ್ಳುತ್ತಿವೆ, ರೋಗಪೀಡತರಾಗುತ್ತಿರುವ ಮುಗ್ದ ಜನರು. ಭಾರೀ ಅನಾಹುತ ಸಂಭವಿಸುವುದಕ್ಕು ಮುನ್ನಾ ಕೆರೆಗಳ ಸಂರಕ್ಷಣೆ ಆಗಬೇಕಿದೆ.