ದೊಡ್ಡಬಳ್ಳಾಪುರ (ಡಿ.4): ತಾಲೂಕಿನ ತೂಬಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಯ್ಯಪ್ಪಸ್ವಾಮಿ ಭಜನಾ ಮಂದಿರ ಬುಧವಾರ ಉದ್ಘಾಟನೆಗೂಂಡಿತು.
ಗಣಪತಿ ಹೋಮ, ಸ್ವಸ್ತಿ ವಾಚನ, ಪಂಚಗವ್ಯ,ಕಳಸ ಸ್ಥಾಪನೆ ಸೇರಿದಂತೆ ಅಯ್ಯಪ್ಪ ಸಹಿತ ವಾಸ್ತು ಬಲಿ ಪ್ರದಾನ ಪೂರ್ಣಾಹುತಿ ಪೂಜೆಗಳು ನಡೆದವು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಭಾಗವಹಿಸಿ ಮಾತನಾಡಿ,
ತೂಬಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿ ವರ್ಷ ಸುಮಾರು 500-600 ಭಕ್ತರು ಅಯ್ಯಪ್ಪ ಸ್ವಾಮಿ ವ್ರತವನ್ನು ಮಾಡುತ್ತಿದ್ದು, ವ್ರತದ 45 ದಿನದ ಅವಧಿಯಲ್ಲಿ ಅವರಿಗೆ ವಾಸ್ತವ್ಯಕ್ಕೆ ಸರಿಯಾದ ಸ್ಥಳದ ಕೊರತೆ ಕಾಡುತ್ತಿತ್ತು, ಆ ದಿಶೆಯಲ್ಲಿ ಈ ಭಜನಾ ಮಂದಿರ ಮಾಡಲಾಗಿದ್ದು ಮಾಲಾಧಾರಿಗಳಿಗೆ ಇನ್ನೂ ಮುಂದೆ ಅನುಕೂಲವಾಗುತ್ತದೆ ಎಂದರು.
ಅಯ್ಯಪ್ಪ ಭಕ್ತರು ಆಗಮಿಸಿ ಹೂ ಹಣ್ಣು-ಕಾಯಿ ಸೇವೆ, ದವಸ ಧಾನ್ಯ ಸೇವೆ ಮುಂತಾದವುಗಳನ್ನು ಸಮರ್ಪಿಸಿದರು. ವಿಶೇಷ ಅಲಂಕಾರದೊಂದಿಗೆ ಶ್ರೀ ಅಯ್ಯಪ್ಪಸ್ವಾಮಿಯ ಪಂಚಲೋಹ ಮೂರ್ತಿ ಕಂಗೊಳಿಸುತ್ತಿತ್ತು ಆಗಮಿಸಿದ ಎಲ್ಲ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು.
ಈ ವೇಳೆ ಗುರುಸ್ವಾಮಿ ಶಿವಾನಂದ, ಪುರುಷೋತ್ತಮ್, ಪುಟ್ಟಣ್ಣ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಪ್ಪಯ್ಯಣ್ಣ, ಮುಖಂಡರಾದ ಕನಕದಾಸ, ಸುಬ್ರಹ್ಮಣ್ಯ, ಉದಯ ಆರಾಧ್ಯ ಹಾಗೂ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹಾಜರಿದ್ದರು.