
ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್ ನಿಂದ ಫೋನ್ ಪೇ ಮೂಲಕ 80 ಸಾವಿರ ಮೋಸದಿಂದ ಪಡೆದು ಆಸ್ಪತ್ರೆಗೂ ಸಹ ದಾಖಲಿಸದೇ ಪರಾರಿಯಾದ ವ್ಯಕ್ತಿಗಳ ಬಂಧನ ಮಾಡಲಾಗಿದೆ…
ಅಪಘಾತದಲ್ಲಿ ಸಿಲುಕಿ ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸುವುದಾಗಿ ನಂಬಿಸಿ ಆತನ ಮೊಬೈಲ್ ನಿಂದ ಫೋನ್ ಪೇ ಮೂಲಕ 80 ಸಾವಿರ ವರ್ಗಾಯಿಸಿಕೊಂಡು ಆಸ್ಪತ್ರೆಗೆ ದಾಖಲಿಸದೆ ಪರಾರಿಯಾಗಿದ್ದ ಇಬ್ಬರು ಐನಾತಿಗಳನ್ನ ಬಂಧಿಸುವಲ್ಲಿ ಜಿಲ್ಲಾ ಸೈಬರ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ.
ಮಹದೇವಪುರ ನಿವಾಸಿ ರಮೇಶ್(25) ಹಾಗೂ ರಮಾಬಾಯಿ ನಗರದ ಮನು(25) ಬಂಧಿತ ಆರೋಪಿಗಳು.ಬಂಧಿತರಿಂದ 80 ಸಾವಿರ ನಗದು ಹಾಗೂ ಎರಡು ಮೊಬೈಲ್ ಗಳನ್ನ ಅಮಾನತುಪಡಿಸಿಕೊಳ್ಳಲಾಗಿದೆ.
ಡಿ.16 ರಂದು ಗಣೇಶ್ ಎಂಬುವರು ಕಡಕೊಳ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುವ ವೇಳೆ ನಾಯಿ ಅಡ್ಡ ಬಂದ ಪರಿಣಾಮ ಆಯತಪ್ಪಿಬಿದ್ದು ಪ್ರಜ್ಞಾಹೀನರಾಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಖದೀಮರು ಆಸ್ಪತ್ರೆಗೆ ದಾಖಲಿಸುವುದಾಗಿ ನಂಬಿಸಿ ಫೋನ್ ಪೇ ಮೂಲಕ 80 ಸಾವಿರ ವರ್ಗಾಯಿಸಿಕೊಂಡು ಆಸ್ಪತ್ರೆಗೂ ದಾಖಲಿಸದೆ ಪರಾರಿಯಾಗಿದ್ದರು. ಈ ಸಂಬಂಧ ಗಾಯಗೊಂಡ ವ್ಯಕ್ತಿ ಸಹೋದರ ದೂರು ನೀಡಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.
ಎಸ್ಪಿ ಎನ್.ವಿಷ್ಣುವರ್ಧನ್,ಅಡಿಷನಲ್ ಎಸ್ಪಿ ಸಿ ಮಲ್ಲಿಕ್ ಹಾಗೂ ಎಲ್ ನಾಗೇಶ್ ಮಾರ್ಗದರ್ಶನದಲ್ಲಿ ಸೈಬರ್ ಠಾಣೆಯ ಡಿವೈಎಸ್ಪಿ ಆರ್.ಶ್ರೀಕಾಂತ್ ರವರ ನೇತೃತ್ವದಲ್ಲಿ ನಿರೀಕ್ಷಕರಾದ ಸುನಿಲ್,ಎಸ್ಸೈ ಸುರೇಶ್ ಬೋಪಣ್ಣ, ಸಿಬ್ಬಂದಿ ಮಂಜುನಾಥ್, ರಂಗಸ್ವಾಮಿ, ಬಸವರಾಜ್ ರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ…