
ಡಿಸೆಂಬರ್ 23……
ರೈತರಿಗೂ ಒಂದು ದಿನವಂತೆ…..
ಭತ್ತ ಬೆಳೆಯುವ ರೈತ ಆತ್ಮಹತ್ಯೆಯತ್ತ, ಅಕ್ಕಿ ಮಾರುವ ವ್ಯಾಪಾರಿ ಅರಮನೆಯತ್ತಾ……
ಇತರ ಕೆಟ್ಟ ರಾಜಕೀಯ ವಿಷಯ ಮತ್ತು ರೈತರ ದಿನದ ಆಯ್ಕೆಯಲ್ಲಿ ಬಹುತೇಕ ಮಾಧ್ಯಮಗಳು ರಾಜಕೀಯ, ಸಿನಿಮಾ ಸುದ್ದಿಗಳಿಗೆ ಮಹತ್ವ ನೀಡಿದರು. ಆಹಾರ ಮತ್ತು ರಾಜಕೀಯದ ನಡುವೆ ರಾಜಕೀಯವೇ ಪ್ರಧಾನವಾಯಿತು….
ಬೆವರಿನ ಮುಂದೆ ಪರ್ಫ್ಯೂಮ್ ಶ್ರೇಷ್ಠವಾಯಿತು………
ನಾವೆಲ್ಲರೂ ನೆನಪಿಡಬೇಕಾದ – ಪ್ರೀತಿಯಿಂದ – ಹೃದಯದಾಳದಿಂದ ಕೃತಜ್ಞತೆ ಸಲ್ಲಿಸಬೇಕಾದ ಅತ್ಯಂತ ಮಹತ್ವದ ದಿನ……….
ರಾಷ್ಟ್ರೀಯ ರೈತ ದಿನ
( ಕಿಸಾನ್ ದಿವಸ್ )
ಡಿಸೆಂಬರ್ 23…
ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಅಂಗವಾಗಿ…….
**************************
ರೈತ ಹುತಾತ್ಮ ದಿನ
ಜೂನ್ 21..
( ಕರ್ನಾಟಕದಲ್ಲಿ ಮಾತ್ರ )
ನರಗುಂದ – ನವಲಗುಂದ ಹೋರಾಟದಲ್ಲಿ ಹುತಾತ್ಮರಾದ ರೈತರ ನೆನಪಿಗಾಗಿ…
*************************
ಅನ್ನದಾತ ಅನಾಥನಾಗುವ ಮುನ್ನ…….
ಅನ್ನಕ್ಕಾಗಿ ನಾವು ಪರದಾಡುವ ಮುನ್ನ……
ರೈತರಿಗೆ ಕೊಡಲು ನಮ್ಮ ಬಳಿ ಹಣವಿಲ್ಲ,
ರೈತರ ಸಂಕಷ್ಟ ಪರಿಹರಿಸಲು ನಮ್ಮ ಬಳಿ ಅಧಿಕಾರವೂ ಇಲ್ಲ,
ಸಣ್ಣ ಪುಟ್ಟ ಹೋರಾಟಗಳಿಗೆ ಕೈ ಜೋಡಿಸಿದರು ಉತ್ತಮ ಫಲಿತಾಂಶ ಕಾಣುತ್ತಿಲ್ಲ.
ಏಕೆಂದರೆ ಪ್ರಾಮುಖ್ಯತೆ ಕೊಡಬೇಕಾದ ವಿಷಯಗಳನ್ನು ಮರೆಸಿ ಭಾವನಾತ್ಮಕ ಅಂಶಗಳನ್ನು ಮುನ್ನೆಲೆಗೆ ತಂದು ಇಡೀ ರೈತ ಸಮೂಹವನ್ನು ವಂಚಿಸಲಾಗುತ್ತಿದೆ.
ಮನರಂಜನೆಗೆ ಸಾಕಷ್ಟು ಪ್ರೇಕ್ಷಕರಿದ್ದಾರೆ,
ರಾಜಕಾರಣಕ್ಕಾಗಿ ಸಾಕಷ್ಟು ಹಿಂಬಾಲಕರಿದ್ದಾರೆ,
ಧಾರ್ಮಿಕ ಕೆಲಸಗಳಿಗೆ ಸಾಕಷ್ಟು ಭಕ್ತರಿದ್ದಾರೆ,
ಆದರೆ ರೈತರ ಕಷ್ಟಗಳಿಗೆ ಧ್ವನಿಯಾಗಲು ಮಾತ್ರ ಕೆಲವೇ ಜನರಿದ್ದಾರೆ.
ಅದಕ್ಕೆ ಕಾರಣ ಜನರಿಗೆ ತಿನ್ನುವ ಅನ್ನ, ಬೆಳೆಯುವ ಕೃಷಿ ಎಂಬುದು ಏನು ಎಂಬುದೇ ಸರಿಯಾದ ತಿಳಿವಳಿಕೆ ಇಲ್ಲ.
ವಿಶ್ವದಲ್ಲಿ ಅತಿಹೆಚ್ಚು ರೈತರನ್ನು ಹೊಂದಿರುವ ದೇಶ ಭಾರತ……..
ಆದರೆ, ಎಲ್ಲಿಯೂ ಹೇಳಿಕೊಳ್ಳುವಷ್ಟು ಸಾರ್ವಜನಿಕ ಆಚರಣೆ ಇರುವುದಿಲ್ಲ, ಸಂಭ್ರಮ ಇರುವುದಿಲ್ಲ, ಚರ್ಚೆಗಳಿರುವುದಿಲ್ಲ, ಕೃತಜ್ಞತೆಗಳಿರುವುದಿಲ್ಲ……….
ಆ ಉಳುವ ಯೋಗಿ ಮಾತ್ರ………..
ಹೇಳುವುದೇನು ?
ಬರೆಯಲು ಒಳ್ಳೆಯ ಪದಗಳು, ಭಾವನೆಗಳು, ಮನಮಿಡಿಯುವ ಘಟನೆಗಳು, ಆಕ್ರೋಶದ ನಿಂದನೆಗಳು, ಪರಿಹಾರದ ಸೂತ್ರಗಳು ಎಲ್ಲವೂ ನೆನಪಾಗುತ್ತದೆ.
ಪ್ರಯೋಜನವೇನು ?
ಅದೇ ಬಡಕಲು ಶರೀರ,
ಅದೇ ಮಾಸಿದ ಬಟ್ಟೆ,
ಅದೇ ಭುಜದ ಮೇಲಿನ ಟವಲ್,
ಅದೇ ಕುಡುಗೋಲು ಕೈಯಲ್ಲಿ,
ಅದೇ ನಿಟ್ಟುಸಿರು,
ಅದೇ ಬೇಡಿಕೆ,
ಅದೇ ಸಾಲಬಾಧೆ,
ಅದೇ ಕೀಟನಾಶಕ ಕುಡಿದು ಆತ್ಮಹತ್ಯೆ,
ಅದೇ ಸುದ್ದಿ,
ಅದೇ ಪರಿಹಾರ,
ಅದೇ ಬೃಹತ್ ಪ್ರತಿಭಟನೆಗಳು….
ದುಡಿದು ದುಡಿದು ಸವೆಯುತ್ತಿರುವ ರೈತರು……
ತಿಂದು ತಿಂದು ಕೊಬ್ಬುತ್ತಿರುವ ಕೆಲವರು……
ದುಡಿಯದೇ ತಿನ್ನುತ್ತಾ ಅನ್ನವೇ ವಿಷವಾಗಿ ಸಾಯುತ್ತಿರುವ ಹಲವರು…
ಕೃಷಿ ಮತ್ತು ರೈತ ನಮ್ಮ ಕಣ್ಣ ಮುಂದೆಯೇ ಬಿಕ್ಕಳಿಸುವುದನ್ನು ನೋಡುವ ದೌರ್ಭಾಗ್ಯ ನಮ್ಮದು…
ಏಳಿ ಎದ್ದೇಳಿ ಎಚ್ಚರಗೊಳ್ಳಿ ,
ಅರ್ಥಮಾಡಿಕೊಳ್ಳಿ ನೀವು ದಡ್ಡರೆಂದು,
ಆಗ ನಿಮಗೆ ಅರಿವಾಗುತ್ತದೆ ನೀವು ಯಾರೆಂದು,
ಆಗ ನಿಮ್ಮ ಶೋಷಣೆಯ ಕಾರಣಗಳು ಅರ್ಥವಾಗುತ್ತದೆ,
ಬೆನ್ನು ಮೂಳೆಗೂ ಎಲುಬಿಲ್ಲದ ನಾಲಿಗೆಗೂ ಇರುವ ವ್ಯತ್ಯಾಸ,
ಆಗ ತೋರಿಸಿ ಈ ದುರಹಂಕಾರಿಗಳಿಗೆ ಅನ್ನದ ಮಹತ್ವ,
ಆಗ ನೋಡಿ ನಿಮ್ಮ ಕಾಲಿಗೆ ಬೀಳುತ್ತಾರೆ, ನೀವೇ ಅನ್ನದಾತರೆಂದು,
ಆಮೇಲೆ ಪ್ರತಿದಿನವೂ ನಿಮ್ಮನ್ನೇ ನೆನಪಿಸಿಕೊಳ್ಳುತ್ತಾರೆ,
ಅಲ್ಲಿಯವರೆಗೂ ನಿಮ್ಮ ದಿನ ನಿಮ್ಮ ತ್ಯಾಗ ಯಾರಿಗೂ ನೆನಪಾಗುವುದಿಲ್ಲ.
ಇದನ್ನು ಸಾಧ್ಯವಾಗಿಸಬೇಕಾಗಿರುವುದು ಶೇಕಡ 70% ರಷ್ಟು ಇರುವ ರೈತರ ವಿದ್ಯಾವಂತ ಮಕ್ಕಳು. ಅವರುಗಳು ಜಾಗೃತರಾದರೆ ಯಾರೂ ತಡೆಯಲು ಸಾಧ್ಯವಿಲ್ಲ.
ರೈತರಾಗುವುದು ವರವೋ ? ಶಾಪವೋ ?
ಅನ್ನದಾತ – ದೇಶದ ಬೆನ್ನೆಲುಬು – ರೈತನೇ ದೇವರು ಈ ಭಾವನಾತ್ಮಕ ನಂಬಿಕೆಗಳನ್ನು ಸ್ವಲ್ಪ ಪಕ್ಕಕ್ಕೆ ಸರಿಸಿ ವಾಸ್ತವ ಪರಿಶೀಲಿಸೋಣ……
ಈ ಕ್ಷಣದಲ್ಲಿ
” ತಿನ್ನವವರಿಗೆ ವರ,
ಬೆಳೆಯುವವರಿಗೆ ಶಾಪ ”
ಮಂಗನಿಂದ ಮಾನವನಾದ ಕಾಲ ಮುಗಿದು ಕ್ರಮೇಣ ಮಾನವ ಮಂಗನಾಗುತ್ತಿರುವ ಈ ಸನ್ನಿವೇಶದಲ್ಲಿ ರೈತ ಮಾತ್ರ ಆಗಲೂ ಮಂಗನೇ ಈಗಲೂ ಮಂಗನೇ ಎಂದು ವಿಷಾದದಿಂದ, ದುಃಖದಿಂದ ಮತ್ತು ಆಕ್ರೋಶದಿಂದ ಹೇಳಬೇಕೆನಿಸುತ್ತದೆ.
ಎಲ್ಲಾ ಕ್ಷೇತ್ರಗಳು ಅಭಿವೃದ್ಧಿಯ ಪಥದಲ್ಲಿ ಸಾಕಷ್ಟು ಮುನ್ನಡೆಯುತ್ತಿರುವಾಗ ಶಿಕ್ಷಣ ಸಾಹಿತ್ಯ ಸಂಗೀತ ವಿಜ್ಞಾನ ಆರೋಗ್ಯ ಆಡಳಿತ ಸಾರಿಗೆ ಸಂಪರ್ಕ ದಿನದಿನಕ್ಕೂ ಹೊಸ ಹೊಸ ಆಯಾಮ ಪಡೆದುಕೊಳ್ಳುತ್ತಿರುವಾಗ ಭಾರತದ ಕೃಷಿ ಮಾತ್ರ ಎಲ್ಲೋ ಕೆಲವು ಸಣ್ಣ ಪುಟ್ಟ ಬದಲಾವಣೆ ಹೊರತುಪಡಿಸಿ ಮೂಲ ನಿಯಮಗಳು ಮಾತ್ರ ಇನ್ನೂ ಗತಕಾಲದ ಅಂಶಗಳನ್ನೇ ಅಳವಡಿಸಿಕೊಂಡಿದೆ.
ಭೂಮಿಯ ಉಪಯೋಗ, ಬಿತ್ತನೆ, ನೀರಾವರಿ, ಸಸ್ಯಗಳ ಬೆಳವಣಿಗೆ, ಕಟಾವು, ಸಂಗ್ರಹಣೆ, ಮಾರುಕಟ್ಟೆ,
ಬೆಲೆ ನಿಗದಿ, ಲಾಭ ಹಣದ ಉಪಯೋಗ, ನಷ್ಟದ ಪರಿಸ್ಥಿತಿಯ ನಿರ್ವಹಣೆ, ಕೌಟುಂಬಿಕ ನಿರ್ವಹಣೆ, ನಂಬಿಕೆಗಳು, ಅರಿವು ಮತ್ತು ಅವರ ಒಟ್ಟು ವ್ಯಕ್ತಿತ್ವ ಸಮಾಜದ ದೃಷ್ಟಿಯಲ್ಲಿ ಇನ್ನೂ ಹಾಸ್ಯಾಸ್ಪದವಾಗಿಯೇ ಇದೆ. ಅವರನ್ನು ಶೋಷಿಸಲು ಯಾವ ತಂತ್ರಗಳೂ ಬೇಡ. ಆತನ ವ್ಯಕ್ತಿತ್ವವೇ ಶೋಷಣೆಯನ್ನು ಸ್ವತಃ ತಾನೇ ಒಪ್ಪಿಕೊಳ್ಳುವ ಮನಸ್ಥಿತಿ ಹೊಂದಿದೆ.
ವ್ಯಕ್ತಿ ಮೂಲಭೂತವಾಗಿ ಪ್ರಜ್ಞಾವಂತನಾಗಿದ್ದರೆ ಆತ ಮಾಡುವ ಕೆಲಸಗಳು ಸಹ ಘನತೆಯಿಂದ ಕೂಡಿರುತ್ತದೆ. ವೈದ್ಯನೇ ಇರಬಹುದು, ಇಂಜಿನಿಯರೇ ಇರಬಹುದು, ಚಾಲಕ ಶಿಕ್ಷಕ ವಕೀಲ ರಾಜಕಾರಣಿ ವ್ಯಾಪಾರೋದ್ಯಮಿ ಯಾರೇ ಆಗಲಿ ಧೃಡ ಮನಸ್ಸಿನ ಅರಿವಿರುವ ವ್ಯಕ್ತಿತ್ವ ಅವನದಾಗಿದ್ದರೆ ಆತ ಯಾವುದೇ ವ್ಯವಸ್ಥೆಯಲ್ಲಿ ಕನಿಷ್ಠ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು.
ಆದರೆ ಮೂಲ ಸಾಮಾನ್ಯ ಜ್ಞಾನ ಇಲ್ಲದ ವ್ಯಕ್ತಿ ಯಾವುದೇ ಕೆಲಸ ಮಾಡಿದರೂ ಆತ ಸೋಲುವ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆಯೇ ಹೆಚ್ಚು.
ವಾಸ್ತವವಾಗಿ ಭಾರತೀಯ ಬಹುತೇಕ ರೈತರು ಸಾಮಾನ್ಯ ಜ್ಞಾನದಿಂದ ವಂಚಿತರಾಗಿದ್ದಾರೆ. ಜಾಗತೀಕರಣದ ಸ್ಪರ್ಧಾತ್ಮಕ ಬದಲಾವಣೆಗಳನ್ನು ಗಮನಿಸಲೇ ಸಾಧ್ಯವಾಗದಂತ ಕತ್ತಲೆಯಲ್ಲಿ ಮುಳುಗುತ್ತಿದ್ದಾರೆ. ರಾಜಕಾರಣಿಗಳ, ಮಧ್ಯವರ್ತಿಗಳ, ವ್ಯಾಪಾರಿ ವಾಣಿಜ್ಯೋದ್ಯಮಿಗಳ ಬಲೆಯೊಳಗೆ ಬಹು ಸುಲಭವಾಗಿ ಸಿಕ್ಕಿಹಾಕಿಕೊಂಡಿದ್ದಾರೆ.
ಬಲಿಷ್ಠ ರಕ್ಷಣಾತ್ಮಕ ಆಡಳಿತ ವ್ಯವಸ್ಥೆ ಹೊಂದಿರುವ ಸರ್ಕಾರದ ವಿರುದ್ಧ ಇನ್ನೂ ಹಳೆಯ ಅಸ್ತ್ರಗಳಾದ ಪ್ರತಿಭಟನೆ, ಮುತ್ತಿಗೆ, ಉಪವಾಸ, ಸತ್ಯಾಗ್ರಹ ಎಂಬ ಮೊಂಡಾದ ಕತ್ತಿಯನ್ನು ಉಪಯೋಗಿಸುತ್ತಿದ್ದಾರೆ.
ಅತಿಯಾದ ಜನಸಂಖ್ಯೆಯ ಪರಿಣಾಮ ಮತ್ತು ಬಡತನ ಅಜ್ಞಾನದ ಕಾರಣದಿಂದ ಅನಿವಾರ್ಯವಾಗಿ ಒಡೆದು ಆಳುವ ರಾಜಕೀಯ ಪಕ್ಷಗಳ ಒತ್ತಡಕ್ಕೆ ಒಳಗಾಗುತ್ತಾರೆ ಮತ್ತು ಅತಿಯಾದ ಹಣದ ಹರಿವಿನಿಂದ ಹಾಗು ಹಣದ ಮಹತ್ವದಿಂದ ರೈತನೆಂಬುದು ಶಾಪವಾಗಿ ಮಾರ್ಪಟ್ಟಿದೆ.
ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬುದನ್ನು ಮರೆಯದಿರಿ. ಮತ ಎಂಬುದು ನಮ್ಮ ಮತಿಯ ( ಮನಸ್ಸಿನ ) ಅಸ್ತ್ರವಾದಾಗ…….
ಒಂದು ವೇಳೆ ಹೊಸ ನಾಯಕತ್ವದ ಹೊಸ ಚಿಂತನೆಯ ಹೊಸ ಗಾಳಿಯೊಂದು ಬಲವಾಗಿ ರೈತರ ಮನಸ್ಸಿನಲ್ಲಿ ಬೀಸಿ ಅವರನ್ನು ಪ್ರಬುದ್ದತೆಯೆಡಗೆ ಆಧುನಿಕತೆಯೆಡೆಗೆ,
ಸ್ವತಂತ್ರ ಚಿಂತನೆಯೆಡೆಗೆ ಮುನ್ನಡೆಸಿದರೆ…..
ವಿಧಾನಸೌದ – ಪಾರ್ಲಿಮೆಂಟು, ಅಧಿಕಾರಶಾಹಿ, ವ್ಯಾಪಾರಿಗಳು, ಮಧ್ಯವರ್ತಿಗಳು,
ವೃತ್ತಿನಿರತರು,
ಅಷ್ಟೇ ಏಕೆ,
ಇಡೀ ವ್ಯವಸ್ಥೆಯೇ ಬುಡಮೇಲಾಗಿ
” ರೈತನೇ ಅನ್ನದಾತ. ನಮ್ಮ ಬದುಕಿನ ಜೀವ ದ್ರವ್ಯ ರೈತನೇ ”
ಎಂದು ಕೂಗಿ ಹೇಳುತ್ತಾ ಎಲ್ಲರೂ ಆತನ ಬಗ್ಗೆ ಘನತೆಯಿಂದ ನಡೆದುಕೊಳ್ಳುವ ದಿನಗಳು ಬರುತ್ತದೆ.
ಮುಖ್ಯವಾಗಿ ರೈತನನ್ನು ಹಾಸ್ಯಾಸ್ಪದವಾಗಿ ನೋಡುವ ಮನರಂಜನಾ ಉದ್ಯಮ, ರಾಜಕೀಯ ವ್ಯವಸ್ಥೆ, ವಾಣಿಜ್ಯೋಧ್ಯಮ, ಮಧ್ಯವರ್ತಿ ವೃತ್ತಿಯಲ್ಲಿರುವವರು ತಾವೇ ಹಾಸ್ಯಾಸ್ಪದವಾಗುತ್ತಾರೆ..
ಆ ಹೊಸ ನಾಯಕತ್ವ ಮತ್ತು ಚಿಂತನೆಯ ತಂಗಾಳಿಗಾಗಿ ಕಾಯುತ್ತಿರುವ……….
ಹಾಗಾಗಲಿ ಎಂದು ಆಶಿಸುತ್ತಾ …………….
ನನ್ನ ಪ್ರೀತಿಯ ಗೆಳೆಯ ಗೆಳತಿಯರೇ……
ನಿಂಬೆ ಹಣ್ಣು ಮಾರುವ ಅಜ್ಜಿಯ ಬಳಿ ಚೌಕಾಸಿ ಮಾಡದಿರಿ…….
ಸೊಪ್ಪಿನ ಅಜ್ಜನ ಬಳಿ ಕೊಸರಾಡದಿರಿ…….
ಕಡಲೆಕಾಯಿ ಮಾರುವವರ ಹತ್ತಿರ ಜಗಳವಾಡದಿರಿ……..
ಹಣ್ಣಿನವನ ಹತ್ತಿರ ಪೌರುಷ ತೋರದಿರಿ…..
ಎಳನೀರಿನವರ ಬಳಿ ಜುಗ್ಗುತನದಿಂದ ವರ್ತಿಸದಿರಿ……..
ಹೂವಿನವರ ಹತ್ತಿರ ನಿಮ್ಮೆಲ್ಲಾ ಜಿಪುಣತನ ಖರ್ಚುಮಾಡದಿರಿ…….
ಗೊತ್ತೇ ನಿಮಗೆ ಹಣ್ಣು ತರಕಾರಿ ಸೊಪ್ಪು ಬೇಳೆಕಾಳುಗಳು ಭತ್ತ ಬೆಳೆಯುವವರ ಕಷ್ಟ,…..
ಗೊತ್ತೇ ನಿಮಗೆ ಅವು ಬೆಳೆಯಲು ಎಷ್ಟು ದಿನ ಬೇಕೆಂದು……
ಗೊತ್ತೇ ನಿಮಗೆ ಅದು ಫಸಲಾಗಲು ಎಷ್ಟು ಜನರು ಶ್ರಮಪಡಬೇಕೆಂದು…..
ಗೊತ್ತೇ ನಿಮಗೆ ಅದಕ್ಕೆ ತಗಲುವ ಖರ್ಚು ಎಷ್ಟೆಂದು……….
ಗೊತ್ತೇ ನಿಮಗೆ ಅದರ ಆರೈಕೆ ಎಷ್ಟು ಕಷ್ಟವೆಂದು…….
ಗೊತ್ತೇ ನಿಮಗೆ ಅದರ ಕಟಾವಿನಲ್ಲಿ ಸುರಿಯುವ ಬೆವರು ಎಷ್ಟೆಂದು…….
ಗೊತ್ತೇ ನಿಮಗೆ ಅದರ ಸಾಗಾಣಿಕೆಯ ಕರ್ಮಕಾಂಡ………
ಗೊತ್ತೇ ನಿಮಗೆ ಅದರಲ್ಲಿ ಆಗುವ ಸೋರಿಕೆಯ ನಷ್ಟ ಎಷ್ಟೆಂದು…….
ಗೊತ್ತೇ ನಿಮಗೆ ಇಷ್ಟಾದರೂ ಅದಕ್ಕೆ ಸಿಗುವ ಪ್ರತಿಫಲ ಎಷ್ಟೆಂದು…..
ನಿಮ್ಮ ಮನೆಯಲ್ಲಿ ಬೇಯುವ ಅನ್ನ ಕಂಪ್ಯೂಟರ್ ನಲ್ಲಿ ತಯಾರಾದದ್ದಲ್ಲ……
ನೀವು ಊಟ ಮಾಡುವ ತರಕಾರಿ ಇಂಟರ್ನೆಟ್ ನಲ್ಲಿ ಬೆಳೆದದ್ದಲ್ಲ……
ಅದು ರೈತರ ಬೆವರ ಹನಿಗಳಿಂದ ಬಸಿದದ್ದು………..
ತಾಕತಿದ್ದರೆ Pizza – Burger ಹೋಟೆಲ್ ಗಳಲ್ಲಿ ಚೌಕಾಸಿ ಮಾಡಿ……..
ಧೈರ್ಯವಿದ್ದರೆ Shopping mall ಗಳಲ್ಲಿ ಕೊಸರಾಡಿ……….
ಶಕ್ತಿಯಿದ್ದರೆ Multiplex theater ಟಿಕೆಟ್ ಕೌಂಟರ್ ನಲ್ಲಿ ಜಗಳವಾಡಿ……..
ಸದ್ಯಕ್ಕೆ ಸಾಮಾನ್ಯರಿಗೆ ಊಟಕ್ಕೇನು ಕೊರತೆ ಇಲ್ಲ,
ರಾಜಕಾರಣಿಗಳಿಗೆ ಓಟು ಕೊಳ್ಳಲು ಸಮಸ್ಯೆ ಇಲ್ಲ,
ಉದ್ಯಮಿಗಳಿಗೆ ವ್ಯಾಪಾರಕ್ಕೇನು ತೊಂದರೆ ಇಲ್ಲ,……
ಡಾಕ್ಟರು, ಆಕ್ಟರು, ಮೇಷ್ಟರು, ಲಾಯರು, ಆಡಿಟರು, ಬ್ರೋಕರು, ಆಫೀಸರು ಯಾರಿಗೂ ತೊಂದರೆ ಏನೂ ಇಲ್ಲ….
ನೋಡೋಣ ಮುಂದೆ..
ರೈತರೆಲ್ಲ ವಿಷ ಕುಡಿದು ಸತ್ತ ಮೇಲೆ, ಊಟಕ್ಕೆ ತೊಂದರೆಯಾದ ಮೇಲೆ ರೈತರನ್ನು ನೆನಪಿಸಿಕೊಳ್ಳೋಣ…….
ಅಲ್ಲಿಯವರೆಗೂ ಚೆನ್ನಾಗಿ ಊಟ ಮಾಡ್ಕೊಂಡು ಎಲ್ರೂ ಆರಾಮವಾಗಿರಿ………
ಬೆಳಗಿನ ಬಿಸಿ ಬಿಸಿ ಕಾಫಿ ಟೀ,
ನಂತರದ ಉಪ್ಪಿಟ್ಟು ಚಿತ್ರಾನ್ನ ಇಡ್ಲಿ ವಡೆ ದೋಸೆ,
ಮಧ್ಯಾಹ್ನದ ರೊಟ್ಟಿ ಚಪಾತಿ ಮುದ್ದೆ ಅನ್ನ, ಸಂಜೆಯ ಪಾನಿಪುರಿ, ಮಸಾಲಾ ಪುರಿ, ಬೇಲ್ ಪುರಿ, ವಡಾ ಪಾವ್, ಪಾವ್ ಬಾಜಿ, ರಾತ್ರಿಯ ಚಿಕನ್ ಮಟನ್ ರೋಟಿ, ದಾಲ್ ಪಾಲಾಕ್, ದೋಕ್ಲಾ, ಕಿಚಡಿ ಎಲ್ಲಾ ದುಡ್ಡು ಕೊಟ್ಟರೆ ಸಿಗುತ್ತದೆ.
ಮನೆಗೇ ತಂದು ಕೊಡುತ್ತಾರೆ.
ಫಾದರ್ಸ್ ಡೇ, ಮದರ್ಸ್ ಡೇ, ಚಿಲ್ಡ್ರನ್ಸ್ ಡೇ, ವ್ಯಾಲೆಂಟೈನ್ ಡೇ, ಆ ಡೇ ಈ ಡೇ….ಎಲ್ಲಾ ಸಂಭ್ರಮದಿಂದ ಆಚರಿಸಿ…..
ನೋಡೋಣ ಗಾಡಿ ಹೀಗೆ ಎಷ್ಟು ದೂರ ಹೋಗುತ್ತೆ ಅಂತ……….
ರೈತರ ಬೆವರಿನ ಘಮಲು,
ಶ್ರಮದ ನಿಟ್ಟುಸಿರು,
ನಿರಾಸೆಯ ಆಕ್ರಂದನ,
ನೋವಿನ ಕೂಗು,
ಈ ಸಮಾಜಕ್ಕೆ ತಟ್ಟುವವರೆಗೂ……
ಆತ್ಮವಂಚಕರು
ನಾವು
ಆತ್ಮವಂಚಕರು…
ಈರುಳ್ಳಿ ನೂರು,
ಟೊಮೆಟೊ ಹತ್ತು,
ಕಬ್ಬಿಗೆ ಕಿಮ್ಮತ್ತಿಲ್ಲ,
ಹತ್ತಿಗೆ ಬೆಲೆ ಇಲ್ಲ,
ಅಡಿಕೆ ಕಾಫಿ ಹುಚ್ಚು ಕುದುರೆ……
ಕುರುಡು ಕೃಷಿ,
ಪೆದ್ದು ರೈತ,
ದಲ್ಲಾಳಿ ಮಾರುಕಟ್ಟೆ
ಚೌಕಾಸಿ ಗ್ರಾಹಕ……….
ಬೇಡಿಕೆಯ ಬಗ್ಗೆ ಸ್ಪಷ್ಟತೆ ಇಲ್ಲ,
ಪೂರೈಕೆಗೆ ಗೊತ್ತು ಗುರಿಯಿಲ್ಲ,
ವ್ಯಾಪಾರದ ನಿಯಮಗಳಿಲ್ಲ,
ಜನರಲ್ಲಿ ಮೌಲ್ಯಗಳೇ ಉಳಿದಿಲ್ಲ…..
ರೈತನದು ಮುರಿದ ಬೆನ್ನುಮೂಳೆ,
ಆಡಳಿತಗಾರರದು ಎಲುಬಿಲ್ಲದ ನಾಲಗೆ,
ಜನರದು ಗೊಂದಲದ ಮೆದುಳು,
ಭಾವನಾತ್ಮಕ ಮನಸ್ಸು,
ನಂಬಿಕೆಯ ಬದುಕು…….
ಕಾಲಿನ ಚಪ್ಪಲಿ ಎಸಿ ರೂಮಿನಲ್ಲಿ,
ಜಗಮಗಿಸುವ ದೀಪದ ಬೆಳಕಿನಲ್ಲಿ, ಸೂಟು ಬೂಟು ಟೈ ಧಾರಿಯ ಮೇಲ್ವಿಚಾರಣೆಯಲ್ಲಿ ಮಾರಾಟ……
ಹೊಟ್ಟೆ ಸೇರುವ ಹಣ್ಣು ತರಕಾರಿಗಳು, ಧೂಳು ತುಂಬಿದ ರಸ್ತೆ ಬದಿಯ ಬಿಸಿಲಿನ ವಾತಾವರಣದಲ್ಲಿ,
ಹರಿದ ಚಡ್ಡಿ ಪಂಚೆ ರವಿಕೆಯ ಬಡವರ ಮಾರ್ಗದರ್ಶನದಲ್ಲಿ…..
ಎಲ್ಲೆಲ್ಲೂ ಹಸಿರು ಪೇಟ ಟವಲುಗಳು,
ಎಲ್ಲರೂ ಮಣ್ಣಿನ ಮಕ್ಕಳೇ,
ಕೃಷಿ ವಿಚಾರ ಸಂಕಿರಣಗಳು,
ಉದ್ದುದ್ದ ರೈತರ ಬಗ್ಗೆ ಭಾಷಣಗಳು……..
ಕುರಿಗಳು ಸಾರ್ ಕುರಿಗಳು,
ಕೋತಿಗಳು ಸಾರ್ ಕೋತಿಗಳು,
ಜಿಗಣೆಗಳು ಸಾರ್ ಜಿಗಣೆಗಳು,
ನರ ರಾಕ್ಷಸರು ಸಾರ್ ನರ ರಾಕ್ಷಸರು…..
ಬರೀ ಟೀಕೆಯೇ ಆಯಿತು. ಪರಿಹಾರವೇನು ಎಂದು ಕೇಳುವಿರಲ್ಲವೇ ?
ಪರಿಹಾರ ಬಹಳಷ್ಟು ಜನರಿಗೆ ತಿಳಿದಿದೆ. ಆದರೆ ಅದರ ಅನುಷ್ಠಾನವೇ ನಮ್ಮ ವ್ಯವಸ್ಥೆಯಲ್ಲಿ ಬಹುದೊಡ್ಡ ಸಮಸ್ಯೆ. ಎಂತಹ ಯೋಜನೆಯೂ ವಿಫಲವಾಗುವ ಸಾಧ್ಯತೆಯೇ ಹೆಚ್ಚು.
ಇದಕ್ಕೆ ಒಂದು ಸಿನಿಮೀಯ ರೀತಿಯ ಉಪಾಯ ಹೊಳೆಯುತ್ತಿದೆ. ಏನೆಂದರೆ…….
ಇಸ್ರೇಲ್, ನಾರ್ವೆ, ಅಮೆರಿಕ, ಜಪಾನ್, ಚೀನಾ ಮುಂತಾದ ಕೆಲವು ದೇಶದ ಪ್ರತಿಭಾವಂತ ಕೃಷಿ ವಿಜ್ಞಾನಿಗಳು ಮತ್ತು ಮಾರುಕಟ್ಟೆ ತಜ್ಞರನ್ನು ಅವರ ಸಾಮರ್ಥ್ಯಕ್ಕೆ ತಕ್ಕಷ್ಟು ಸಂಬಳ ನೀಡಿ ಕರೆತಂದು ಕೇಂದ್ರ ಮತ್ತು ಎಲ್ಲಾ ರಾಜ್ಯಗಳ ಕೃಷಿ ಮತ್ತು ಕೃಷಿ ಮಾರುಕಟ್ಟೆ ಸಂಸ್ಥೆಗಳನ್ನು ಸ್ಥಾಪಿಸಿ ಅದಕ್ಕೆ ಇವರನ್ನು ಅಧ್ಯಕ್ಷರನ್ನಾಗಿ ಮಾಡಿ ಸಂಪೂರ್ಣ ಸಂವಿಧಾನಾತ್ಮಕ ಸ್ವಾಯತ್ತತೆ ನೀಡಬೇಕು. ಕನಿಷ್ಟ 10 ವರ್ಷಗಳ ವರೆಗೆ ಅವರನ್ನು ಯಾವ ಕಾರಣಕ್ಕೂ ಬದಲಾಯಿಸಬಾರದು. ಕೃಷಿ ಮತ್ತು ಮಾರುಕಟ್ಟೆಗೆ ಒಳಪಟ್ಟ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ನೇಮಿಸುವ – ವರ್ಗಾಯಿಸುವ – ಸಸ್ಪೆಂಡ್ ಮಾಡುವ ಅಧಿಕಾರ ಅವರಿಗೆ ನೀಡಬೇಕು. ಈ ಸಮಯದಲ್ಲಿ ಕೃಷಿ ಮತ್ತು ಕೃಷಿ ಮಾರುಕಟ್ಟೆ ಮಂತ್ರಿ ಪದವಿಯನ್ನು ರದ್ದುಪಡಿಸಬೇಕು.
ಆಗ ಒಂದಷ್ಟು ಬದಲಾವಣೆ ಸಾಧ್ಯ.
ಏಕೆಂದರೆ, ಅವರಲ್ಲಿ ಜಾತೀಯತೆ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಕಡಿಮೆ ಎಂದು ಕೇಳಿದ್ದೇನೆ. ದೊಡ್ಡ ಸಂಬಳ ಮತ್ತು ಅಧಿಕಾರ ಕೊಟ್ಟರೆ ಲಂಚಕ್ಕೆ ಕೈ ಹಾಕುವುದಿಲ್ಲ ಮತ್ತು ನಿಷ್ಠುರ ವಾದಿಗಳು ಎಂದೂ ಹೇಳಲಾಗುತ್ತದೆ.
ಹೌದು, ಇಲ್ಲಿನ ನೆಲಮೂಲ ಸಂಸ್ಕೃತಿ, ಕೃಷಿಯ ಮಣ್ಣಿನ ಗುಣಲಕ್ಷಣಗಳು, ಭಾಷೆ ಮುಂತಾದ ಸ್ಥಳೀಯ ವಿಷಯಗಳಲ್ಲಿ ಅವರಿಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಆದರೆ ಆ ಕೊರತೆಯನ್ನು ಅವರು ಇಲ್ಲಿನ ಅದಕ್ಕೆ ಸಂಬಂಧಪಟ್ಟ ಜನರ ಸಲಹೆ ಪಡೆದು ಸರಿಯಾದ ತೀರ್ಮಾನ ಕೈಗೊಳ್ಳುವ ಮೂಲಕ ನೀಗಿಸಿಕೊಳ್ಳಬಹುದು.
ಅಲ್ಲದೆ ನಮ್ಮ ಜನ ಬಿಳಿ ಚರ್ಮದ, ವಿದೇಶಿ ಸಂಸ್ಕೃತಿಯ ಜನರ ಬಗ್ಗೆ ಸ್ವಲ್ಪ ಭಯ ಮತ್ತು ಗೌರವ ಹೊಂದಿದ್ದಾರೆ. ಯಾವುದೇ ರಾಜಕೀಯ ಪ್ರಭಾವಕ್ಕೆ ಅವರು ಒಳಗಾಗುವುದಿಲ್ಲ ಎಂಬ ಅಭಿಪ್ರಾಯವೂ ಇದೆ. ಅವರು ಮತದಾರರ ಅಥವಾ ರಾಜಕಾರಣಿಗಳ ಮುಲಾಜಿಗೆ ಒಳಗಾಗುವ ಸಾಧ್ಯತೆಗಳು ಇರುವುದಿಲ್ಲ.
ಮತ್ತೇನು ಮಾಡುವುದು, ನಮ್ಮ ಜನರಿಗೆ ಊಟ ಬಟ್ಟೆ ಕುಡಿತ ಮನರಂಜನೆ ಎಲ್ಲಾ ವಿಷಯಗಳಲ್ಲೂ ವಿದೇಶಿಯರೇ ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ. ಆ ಮನೋಭಾವವನ್ನೇ ಕೃಷಿ ಮತ್ತು ಮಾರುಕಟ್ಟೆಯ ಮೇಲೆ ಉಪಯೋಗಿಸಿದರೆ ಒಳ್ಳೆಯದಲ್ಲವೇ ?
ವಾಸ್ತವಕ್ಕಿಂತ ಸಿನಿಮೀಯ ಮಾದರಿಯ ಕಲ್ಪನೆಯೇ ಖುಷಿ ಕೊಡುತ್ತದೆ…….
ಪಾತಾಳಕ್ಕಿಳಿದಿರುವ ಆರ್ಥಿಕ ಕುಸಿತದ ಸಮಯದಲ್ಲಿ ಇನ್ನೂ ಭಜನೆ ಮಾಡುತ್ತಾ ಕುಳಿತರೆ ಹೊಟ್ಟೆಗೆ ಮಣ್ಣು ತಿನ್ನಬೇಕಾದೀತು………
ಎಚ್ಚೆತ್ತುಕೊಳ್ಳೋಣ,…..
ರೈತರ ನಾಡಿನಲ್ಲಿ,
ಮಣ್ಣಿನ ಮಕ್ಕಳ ಭೂಮಿಯಲ್ಲಿ,
ಶ್ರಮಜೀವಿಗಳ ನೆಲದಲ್ಲಿ,
ಅನ್ನದಾತರ ಒಡಲಲ್ಲಿ……..
ಮತ್ತೆ ಹೊಸ ಕನಸುಗಳು ಚಿಗುರಲಿ,
ಹೊಸ ಬೆಳಕು ಮೂಡಲಿ,
ರೈತರೇ ಭಾರತದ ಆರ್ಥಿಕತೆಯ ಬೆನ್ನೆಲುಬು ಎಂದು ಸಾಬೀತಾಗಲಿ.
ನಮ್ಮೆಲ್ಲರ ಬದುಕು ಹಸನಾಗಲಿ…….
ಕ್ಷಮಿಸಿ,
ಇದು ಯಾರ ವಿರುದ್ಧದ ದ್ವೇಷವೂ ಅಲ್ಲ,
ನಿಮ್ಮ ಮನಸ್ಸಿನ ಜಾಗೃತಿಗಾಗಿ,
ನಿಮ್ಮ ಗಮನ ಸೆಳೆಯಲು,
ರೈತರ ಶ್ರಮವನ್ನು ನಿಮಗೆ ನೆನಪಿಸಲು,
ಆಹಾರದ ಮಹತ್ವ ಸಾರಲು ಮಾತ್ರ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ