ಅತಿಥಿ ಉಪನ್ಯಾಸಕರ ಹೋರಾಟಕ್ಕೆ ತಾತ್ಕಾಲಿಕ ಜಯ

ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯಾದ್ಯಂತ ಸುಮಾರು ಒಂದು ತಿಂಗಳಿಯಿಂದ ನಡೆದ ಧರಣಿ, ಪ್ರತಿಭಟನೆಗೆ ಕೊನೆಗೂ ರಾಜ್ಯ ಸರಕಾರ ಉಪನ್ಯಾಸಕರ ವೇತನವನ್ನು ಐದು ಸಾವಿರ ರೂಪಾಯಿ ಹೆಚ್ಚಳಕ್ಕೆ ನಿರ್ಧರಿಸಿದ್ದು, ಇದು ಹೋರಾಟಕ್ಕೆ ಸಂದ ತಾತ್ಕಾಲಿಕ ಜಯ ಅಷ್ಟೇ ನಮ್ಮ ಪೂರ್ಣ ಪ್ರಮಾಣದ ಬೇಡಿಕೆಗಳನ್ನು ರಾಜ್ಯ ಸರಕಾರ ಪರಿಗಣಿಸಬೇಕಾಗಿದೆ ಎಂದು ಅತಿಥಿ ಉಪನ್ಯಾಸಕ ಸಂಘದ ರಾಜ್ಯ ಅಧ್ಯಕ್ಷ ನಾಗನಾಳ ಮುನಿಯಪ್ಪ ತಿಳಿಸಿದರು.

ಬೆಂಗಳೂರಿನ ವಿಕಾಸಸೌಧದಲ್ಲಿ ಶುಕ್ರವಾರ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅಧ್ಯಕ್ಷತೆಯಲ್ಲಿ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ, ಆರೋಗ್ಯ ವಿಮೆ, ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ಸೇರಿದಂತೆ ಕೆಲ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಆದರೆ, ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ವಿಲಿನತೆ ಸೇರಿದಂತೆ ಸೇವಾ  ಖಾಯಂಗಾಗಿ ಸರಕಾರ ಮುಂದಾಗಬೇಕಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರವು ಅತಿಥಿ ಉಪನ್ಯಾಸಕರು 60 ವರ್ಷ ಪೂರೈಸಿ ಕೆಲಸ ಬಿಡುವಾಗ 5 ಲಕ್ಷ ನೀಡಲು ಸರಕಾರ ತೀರ್ಮಾನ ಮಾಡಲಾಗಿದೆ. ಇದು ಒಳ್ಳೆಯ ತೀರ್ಮಾನವೇ ಆದರೆ, ವೇತನವನ್ನು ಹತ್ತು ತಿಂಗಳಿಗೆ ಬದಲಾಗಿ ವರ್ಷದ 12 ತಿಂಗಳು ವೇತನ ನೀಡಬೇಕು ಜೊತೆಗೆ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ಪರಿಗಣಿಸುವ ಜೊತೆಗೆ ಹೊಸದಾಗಿ ನೇಮಕಾತಿ ಸಂದರ್ಭದಲ್ಲಿ ಪದೇ ಪದೇ ನಮ್ಮನ್ನು ಸಂದರ್ಶನ ಮಾಡದಂತೆ ನೇಮಕ ಮಾಡಿಕೊಳ್ಳಬೇಕು ಸರಕಾರವು ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಜಾರಿ ಮಾಡುವ ತನಕ ಅತಿಥಿ ಉಪನ್ಯಾಸಕರು ತರಗತಿಗಳಿಗೆ ಹೋಗದಂತೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಅತಿಥಿ ಉಪನ್ಯಾಸಕರ ಸಂಘದ ಗೌರವ ಅಧ್ಯಕ್ಷ ರವಿಕುಮಾರ್, ರಾಜ್ಯ ಮಹಿಳಾ ಸಂಚಾಲಕಿ ಸಿ.ಎನ್ ನಾಗಮಣಿ, ಮುಖಂಡರಾದ ಆರ್.ಲಕ್ಷ್ಮೀನಾರಾಯಣ್, ಸರಿತಾ ಕುಮಾರಿ, ನೂರ್ ಅಹಮದ್, ಶಹಬಾಜಾ ಅಹಮದ್, ಕೆ.ಎನ್ ತ್ಯಾಗರಾಜ್, ತೋಕಲಘಟ್ಟ ರವೀಂದ್ರ, ಎ.ಬಿ ರಮೇಶ್, ಮುಂತಾದವರು ಇದ್ದರು

Leave a Reply

Your email address will not be published. Required fields are marked *