ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನಿಂದ ಕ್ರೂರವಾಗಿ ಹಲ್ಲೆ: ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು: ಒಬ್ಬ ಬಾಲಕ ಜೀವನ್ಮರಣ ಹೋರಾಟ

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ.

ಘಟನೆಯಲ್ಲಿ 9 ವರ್ಷದ ಮಹಮ್ಮದ್ ಇಶಾಕ್, 7 ವರ್ಷದ ಮಹಮ್ಮದ್ ಜುನೇದ್ ಸ್ಥಳದಲ್ಲೇ ಮೃತಪಟ್ಟಿದ್ದರೆ, 5 ವರ್ಷದ ರೋಹನ್ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.

35 ವರ್ಷದ ಖಾಸೀಂ ಮೂರು ಮಕ್ಕಳ ಗುಪ್ತಾಂಗಗಳಿಗೆ ಕಬ್ಬಿಣದ ರಾಡ್‌ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ.

ಗಾರೆ ಕೆಲಸ ಮಾಡುವ ಚಾಂದ್‌ ಪಾಷಾ ಕಮ್ಮಸಂದ್ರದ ಮನೆಯಲ್ಲಿ ಪತ್ನಿ, ಮೂವರು ಮಕ್ಕಳು, ತಾಯಿ ಮತ್ತು ತಮ್ಮನ ಜೊತೆ ವಾಸವಿದ್ದರು. ಪತ್ನಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಾರೆ. ದಂಪತಿ ಕೆಲಸಕ್ಕೆ ಮತ್ತು ಪಾಷಾ ತಾಯಿ ಮಾರುಕಟ್ಟೆಗೆ ಹೋಗಿದ್ದರು. ಈ ಹಿನ್ನೆಲೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮಕ್ಕಳ ಬಾಯಿಗೆ ಬಟ್ಟೆ ತುರುಕಿದ ಖಾಸಿಂ ಕಬ್ಬಿಣದ ರಾಡ್‌ ಮತ್ತು ಸುತ್ತಿಗೆಯಿಂದ ಮಕ್ಕಳ  ಖಾಸಗಿ ಭಾಗ ಹಾಗೂ ತಲೆಗೆ ಬಲವಾಗಿ ಹೊಡೆದಿದ್ದಾನೆ ಎನ್ನಲಾಗಿದೆ.

ಮಕ್ಕಳ ಕೂಗಾಟ ಕೇಳಿಸದಂತೆ ಮೂವರ ಬಾಯಿಗೆ ಬಟ್ಟೆ ತುರುಕಿದ್ದರೂ ಮಕ್ಕಳು ಕೂಗು, ಗಲಾಟೆ ಅಕ್ಕಪಕ್ಕದ ಮನೆಯವರಿಗೆ ಕೇಳಿಸಿದೆ. ಅನುಮಾನಗೊಂಡ ಅವರು ಬಾಗಿಲು ತಟ್ಟಿದಾಗ ಖಾಸಿಂ ತೆಗೆಯಲಿಲ್ಲ. ಆಗ ಬಾಗಿಲು ಒಡೆದು ಒಳ ನುಗ್ಗಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಕ್ಕಳಲ್ಲಿ ಇಬ್ಬರು ಮೃತಪಟ್ಟಿದ್ದರು.

ಮತ್ತೊಬ್ಬ ಬಾಲಕ ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣವೇ ಆತನನ್ನು ಸ್ಥಳೀಯರು ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಿದರು.

ಮಾನಸಿಕ ಅಸ್ವಸ್ಥನಾಗಿದ್ದ ಖಾಸಿಂ ಕಳೆದ ತಿಂಗಳು ಮನೆಯಿಂದ ಏಕಾಏಕಿ ಕಾಣೆಯಾಗಿದ್ದ. ತಮ್ಮನನ್ನು ಅಣ್ಣ ಚಾಂದ್‌ ಪಾಷಾ ಹುಡುಕಿ ಕರೆ ತಂದು ಮನೆಯಲ್ಲಿಯೇ ಇಟ್ಟುಕೊಂಡಿದ್ದ.

ಜಂಟಿ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌, ಡಿಸಿಪಿ ಎಂ.ನಾರಾಯಣ್‌, ಎಸಿಪಿ ಸತೀಶ್, ಇನ್‌ಸ್ಪೆಕ್ಟರ್‌ ಸೋಮಶೇಖರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Leave a Reply

Your email address will not be published. Required fields are marked *

error: Content is protected !!