ಕೋಲಾರ : ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಸಾಗುವಳಿ ಚೀಟಿ ಅವ್ಯವಹಾರ ತನಿಖೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ ಪಿ ನಂಬರ್ ದುರಸ್ಥಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕಂದಾಯ ಸಚಿವ ಸಿ.ಬಿ ಕೃಷ್ಣಬೈರೇಗೌಡ ಅವರಿಗೆ ರೈತ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಸಂಭಾಂಗಣದಲ್ಲಿ ಕಂದಾಯ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ವೇಳೆ ಮನವಿ ಸಲ್ಲಿಸಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದನೆ ದೊರೆಯುತ್ತಿಲ್ಲ. ಜಿಲ್ಲೆಯ ಆರು ತಾಲ್ಲೂಕಿನ ತಾಲ್ಲೂಕು ಕಛೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ನಿತ್ಯ ರೈತರು ಕಛೇರಿಗೆ ಅಲೆಯುವ ದುಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ಕೋಲಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಮಾಲೂರಿನ ಜಮೀನು ಒಂದರ ಭೂ ಪರಿವರ್ತನೆಗೆ ಲಂಚ ಪಡೆಯುವ ವೇಳೆ ಸಿಬ್ಬಂದಿಗಳು ಲೋಕಯುಕ್ತ ಬಲೆಗೆ ಬಿದ್ದಿದ್ದಾರೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದರೂ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುವಲ್ಲಿ ವಿಫಲಾಗಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.
ತಾಲ್ಲೂಕು ಕಛೇರಿಗಳಲ್ಲಿ ದಲ್ಲಾಳಿಗಳ ಮುಖಾಂತರ ಹೋದರೆ ಮಾತ್ರ ಕೆಲಸ ಆಗುತ್ತದೆ. ಅಧಿಕಾರಿಗಳು, ಸಿಬ್ಬಂದಿಗಳು ಉಳ್ಳವರಿಗೆ ಒಂದು ನ್ಯಾಯ, ಬಡವರಿಗೆ ಒಂದು ನ್ಯಾಯ ಮಾಡುತ್ತಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಶ್ರೀನಿವಾಸಪುರ ಸೇರಿದಂತೆ ಜಿಲ್ಲೆಯಾದ್ಯಂತ ಅರಣ್ಯ ಭೂಮಿಯನ್ನು ರೈತರಿಗೆ ಅಕ್ರಮವಾಗಿ ಮಂಜೂರು ಮಾಡಿದ್ದಾರೆ, ಇದೀಗ ಅರಣ್ಯ ಇಲಾಖೆಯಿಂದ ತೆರವು ಮಾಡುತ್ತಿದ್ದು ರೈತರೆಲ್ಲ ಬೀದಿಪಾಲಾಗುತ್ತಿದ್ದಾರೆ, ಜೀವನೋಪಾಯಕ್ಕಾಗಿ ಕಂದಾಯ ಇಲಾಖೆಯಿಂದ ದರಖಾಸ್ತು ಸಮಿತಿಂದ ಭೂ ಮಂಜೂರು ಮಾಡಬೇಕು. ಆ ಮೂಲಕ ಅವರ ಸಂಕಷ್ಟ ನಿವಾರಿಸಬೇಕು ಅಕ್ರಮ ಸಾಗುವಳಿ ಚೀಟಿ ಹಂಚಿಕೆ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿದೆ, ಇದಕ್ಕೆ ಕಾರಣವಾಗಿರುವ ತಹಶಿಲ್ದಾರ್, ರಾಜಸ್ವ ನೀರಿಕ್ಷಕರ, ಕಾರ್ಯದರ್ಶಿ, ದರಖಾಸ್ತು ಸಮಿತಿ ಅಧ್ಯಕ್ಷರು, ಸದಸ್ಯರ ವಿರುದ್ಧ ಯಾವುದೇ ರೀತಿ ಕ್ರಮಕೈಗೊಳ್ಳದೆ ಸರ್ಕಾರವು ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಮುಳಬಾಗಿಲಿಗೆ ಖಾಯಂ ತಹಶಿಲ್ದಾರ್ ನೇಮಕ ಮಾಡಬೇಕು, ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ಒಂದೇ ಕಡೆ ೧೦ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ, ಅಧಿಕಾರಿಗಳನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕು. ಆ ಮೂಲಕ ಇಲಾಖೆಯಲ್ಲಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಬೇಕು ಎಂದು ತಿಳಿಸಿದರು.
ವೇಮಗಲ್, ನರಸಾಪುರ, ಮಾಲೂರು ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗಿವೆ, ಜಿಲ್ಲೆಯಲ್ಲಿ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ಕಾರಿಡಾರ್ ರಸ್ತೆ ಹಾದು ಹೋಗಿದ್ದು ಭೂಮಿಗೆ ಬಂಗಾರದ ಬೆಲೆ ಬಂದಿದ್ದೆ, ಇದಕ್ಕೆ ಪೂರಕವಾಗಿ ಭೂಗಳ್ಳರ ಕಾಟವು ಹೆಚ್ಚಾಗಿದ್ದು ಸರ್ಕಾರಿ ಜಮೀನುಗಳಿಗೆ ದಾಖಲೆ ಸೃಷ್ಟಿಸಿ ಕಬಳಿಸುವ ಯತ್ನಗಳು ನಡೆಯುತ್ತಿವೆ, ಇದಕ್ಕೆ ಮುಳಬಾಗಿಲು ತಾಲೂಕಿನ ದೇವರಾಯ ಸಮುದ್ರದ ಬಳಿ ಜರುಗಿರುವ ಪ್ರಕರಣ ಹಾಗೂ ನಕಲಿ ಸಾಗುವಳಿ ಚೀಟಿ ನೀಡಿರುವುದೇ ಸಾಕ್ಷಿ ಆಗಿದೆ ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರ, ಸರ್ಕಾರಿ ವಸತಿ ನಿಲಯಗಳಿಗೆ ಶೇ.೧೦೦ರಷ್ಟು ನಿವೇಶನ ಕಲ್ಪಿಸಿ ಸ್ವಂತ ಸೂರು ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು. ಗ್ರಾಮ ಲೆಕ್ಕಿಗರು ಮೂಲ ಸ್ಥಾನ ಬಿಟ್ಟು ಅರ್ಹತೆಯಿಲ್ಲದೆ ಕೆಲ ಹುದ್ದೆಗಳಿಗೆ ನಿಯೋಜನೆಗೊಂಡಿದ್ದಾರೆ, ಇದು ಇಲಾಖೆಯ ಪ್ರಗತಿಯ ಮೇಲೂ ಪರಿಣಾಮ ಬೀರುತ್ತಿದ್ದು, ನಿಯೋಜನೆ ರದ್ದು ಮಾಡಿ ಮೂಲಸ್ಥಾನಕ್ಕೆ ವಾಪಸ್ ಹೋಗಲು ಸೂಚಿಸಬೇಕು.
ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳು ಸಕಾಲಕ್ಕೆ ಇತ್ಯರ್ಥವಾಗುತ್ತಿಲ್ಲ, ದಾಖಲೆಗಳು ಸಮಪರ್ಕವಾಗಿದ್ದರು ದಲ್ಲಾಳಿಗಳ ಅಣತಿಯಂತೆ ಆದೇಶವಾಗುತ್ತಿದೆ. ಇದು ಪಾದರ್ಶಕವಾಗಿ ನಡೆಯಬೇಕು. ಭೂ ಕಬಳಿಕೆ ನ್ಯಾಯಾಲಯವನ್ನು ರಾಜಕೀಯ ಪಕ್ಷಗಳು ಉದ್ದೇಶ ಪೂರ್ವಕವಾಗಿಯೇ ಸ್ಥಗತಿಗೊಳಿಸಿದ್ದು, ಇದನ್ನು ಯಾಥಾವತ್ಥಾಗಿ ಮುಂದು ವರೆಸಬೇಕು, ಇದರಿಂದಾಗಿ ಸರ್ಕಾರಿ ಜಮೀನುಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದರು.
ಸುಮಾರು ದಶಗಳಿಂದ ಪಿ ನಂಬರ್ ದುರಸ್ತಿ ಸಮಸ್ಯೆಯು ಶಾಶ್ವತವಾಗಿ ಉಳಿದಿದೆ, ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ತಾಲೂಕು ವ್ಯಾಪ್ತಿಗಳಲ್ಲಿ ಪಿ ನಂಬರ್ ತೆರವು ನಡೆಯುತ್ತಿದೆ, ಇದು ಸಹ ಲಕ್ಷಾಂರ ರೂ ಹಣ ಕೊಟ್ಟರೆ ಮಾತ್ರ ಅಧಿಕಾರಿಗಳು ಮಾಡುತ್ತಾರೆ, ಆದರೆ ಜಿಲ್ಲೆಯಲ್ಲಿ ಈ ಸಮಸ್ಯೆಯು ಲಕ್ಷಾಂತರ ಮಂದಿಯದ್ದಾಗಿದ್ದು ಇದು ಅಂದೋಲನ ರೀತಿಯಲ್ಲಿ ಆಗಬೇಕಿದೆ. ಸರ್ಕಾರವು ವಿಶೇಷ ಗಮನ ಹರಿಸಿ ಜಿಲ್ಲಾಡಳಿತ ಹಂತದಲ್ಲಿ ನ್ಯಾಯಲಯ ತೆರೆಯಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಮನವಿ ನೀಡುವಾಗ ಮಂಗಸಂದ್ರ ತಿಮ್ಮಣ್ಣ, ಪುತ್ತೇರಿ ರಾಜು, ಗೀರೀಶ್, ಈಕಂಬಳ್ಳಿ ಮಂಜುನಾಥ್ ಮುಂತಾದವರಿದ್ದರು.